
ಅರುಣಾಚಲ ಪ್ರದೇಶದ ಟಕ್ಸಿಂಗ್ ಸೆಕ್ಟರ್ನಲ್ಲಿ ಉಂಟಾಗಿರುವ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಸೇನಾ ಅಧಿಕಾರಿಗಳ ನಡುವೆ ಮೊದಲ ಬಾರಿಗೆ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ.
ಭಾರತೀಯ ನಿಯೋಗದ ನೇತೃತ್ವವನ್ನು 3 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಗಿರೀಶ್ ಕಾಲಿಯಾ ವಹಿಸಿದ್ದು, ಗಡಿಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ಚೀನಾಗೆ ಭಾರತ ತಾಕೀತು ಮಾಡಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಇತ್ತೀಚಿನ ಬೀಜಿಂಗ್ ಭೇಟಿಯ ನಂತರ ಈ ಮಿಲಿಟರಿ ಸಭೆ ನಡೆದಿದ್ದು, ಗಡಿ ನಿಯಂತ್ರಣಕ್ಕಾಗಿ ಹೆಚ್ಚುವರಿ ಸಂವಹನ ವೇದಿಕೆಗಳನ್ನು ರೂಪಿಸಲು ಒಪ್ಪಿಗೆ ಸಿಕ್ಕಿದೆ.