
ಬೀದರ್ ಜಿಲ್ಲೆಯಲ್ಲಿ ಮಳೆ ಕೊರತೆಯ ನಡುವೆಯೂ ಕಷ್ಟಪಟ್ಟು ಬೆಳೆದ ಟೊಮ್ಯಾಟೋ ಬೆಲೆಯು ಮಾರುಕಟ್ಟೆಯಲ್ಲಿ ಕೆಜಿಗೆ ಕೇವಲ 5 ರೂಪಾಯಿಗೆ ಕುಸಿದಿರುವುದರಿಂದ ತರಕಾರಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೀದರ್ ತಾಲೂಕಿನ ರಾಜನಾಳ ಗ್ರಾಮದ ರೈತ ಗೋರಖ್ ಸೇರಿದಂತೆ ಹಲವು ಬೆಳೆಗಾರರು ಬಿತ್ತನೆ, ಗೊಬ್ಬರ ಮತ್ತು ಕೀಟನಾಶಕಕ್ಕೆ ಮಾಡಿದ ಸಾವಿರಾರು ರೂಪಾಯಿ ಖರ್ಚು ಹಾಗೂ ಕಟಾವು ಮಾಡುವ ಕೂಲಿಯೂ ಸಿಗದೆ ಕಣ್ಣೀರು ಹಾಕುತ್ತಿದ್ದಾರೆ.
ಮಾರುಕಟ್ಟೆಗೆ ಸಾಗಿಸುವ ವಾಹನ ಬಾಡಿಗೆಯೂ ಸಿಗದ ಕಾರಣ ಬೆಳೆಗಳನ್ನು ಹೊಲದಲ್ಲೇ ಕೊಳೆಯಲು ಬಿಡುವ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ಹಾಗೂ ನಷ್ಟ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.